ಅಪ್ಪ ಹಾಕಿದ ಆಲದ ಮರ

 



ನಾವು ಕೇಳಿರಬಹುದು ಈ ಗಾದೆ ಮಾತನ್ನು ಅಪ್ಪ ಹಾಕಿದ ಆಲದ ಮರಕ್ಕೆ ನಾವು ನೇಣುಬಿಗಿದುಕೊಳ್ಳಬೇಕೆ. ಈ ಗಾದೆ ಮಾತು ಎಲ್ಲರ ಜೀವನಕ್ಕೂ ಅನ್ವಯಿಸುತ್ತದೆ. ನಾವು ವಿದ್ಯಾಭ್ಯಾಸ ಮಾಡುತ್ತೇವೆ ನೌಕರಿಗಳನ್ನು ಹುಡುಕುತ್ತೇವೆ , ಕೆಲಸ ಮಾಡುತ್ತ ನಾವು ತಿರುಗಿ ನೋಡಿದಾಗ ನಮ್ಮ ಕೆಲಸ ನಮ್ಮ ತಂದೆ ತಾಯಿಯ ಮಾಡುವ ವೃತ್ತಿಯಾಗಿರುತ್ತದೆ .ಉದಾಹರಣೆಗೆ ನನ್ನ ತಂದೆ ಪೊಲೀಸ್, ನಾನು ಶಿಕ್ಷಕನಾಗಬೇಕು ಎಂಬ ಆಸೆ ಚಿಕ್ಕಂದಿನಲ್ಲಿ ಮೊಳೆಯುವುದು ಕಡಿಮೆ, ನನ್ನ ತಂದೆ ಪೊಲೀಸ್ ನಾನು ಕೂಡ ಪೊಲೀಸ್ ಆಗಬೇಕು ಎಂದು ಹೇಳುವ ಮಕ್ಕಳನ್ನು ನೋಡಿದ್ದೇವೆ.

ನಮ್ಮ ತಂದೆ ತಾಯಿಯರು ಯಾವ ವೃತ್ತಿಯನ್ನು ಮಾಡುತ್ತಾರೋ ಆ  ವೃತ್ತಿಯನ್ನು ನಾವು ಪಡೆಯಲು ಪ್ರಯತ್ನಿಸಿದರೆ ನಮಗೆ ಸರಳವಾಗಿ ನಮ್ಮ ಕೆಲಸಗಳು ನಮ್ಮ ತಂದೆ ತಾಯಿಯರಿಗೆ ಇರುವ ಸಂಪರ್ಕದಿಂದ ಸಾಧ್ಯ ಎಂದು ತಿಳಿದುಕೊಳ್ಳಬಹುದು.

ಒಂದು ಉದಾಹರಣೆ ನೋಡುವುದಾದರೆ ನಮ್ಮ ದೇಶದ ಬಹಳ ಹಳೆಯ ಪಕ್ಷ ಕಾಂಗ್ರೆಸ್ ಪಕ್ಷ , ಈ ಪಕ್ಷದ ನಾಯಕನಾಗಿ ಜವಾಹರ್ ಲಾಲ್ ನೆಹರು ಪ್ರಧಾನಮಂತ್ರಿಯಾಗಿದ್ದರು. ಅವರ ಮಗಳು ಇಂದಿರಾಗಾಂಧಿ ಕೂಡ ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದ್ದರು ಹಾಗೂ ಇಂದಿರಾಗಾಂಧಿಯವರ ಮಗ ರಾಜೀವ್ ಗಾಂಧಿ ಕೂಡ ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದರು .ಈಗ ರಾಜೀವ್ ಗಾಂಧಿಯ ಪುತ್ರ ರಾಹುಲ್ ಗಾಂಧಿ ಕೂಡ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವುದರಲ್ಲಿ ಸಂಶಯವೇನು ಇಲ್ಲ. ಇದನ್ನು ನಮ್ಮ ಸಮಾಜವು ವಂಶ ಪಾರಂಪರ್ಯ ರಾಜಕೀಯ ಎಂದು ಹೇಳಬಹುದು.

ನಮ್ಮ ದೇಶದ ವ್ಯವಸ್ಥೆಯನ್ನು ನೋಡಿದಾಗ ಎಲ್ಲರೂ ಕೂಡ ಒಂದಲ್ಲ ಒಂದು ರೀತಿ ಅಪ್ಪ ಹಾಕಿದ ಆಲದ ಮರದ ಸುತ್ತ ಸುತ್ತುವರೇ . ಎಲ್ಲೋ ಕೆಲವು ಜನರು ಅಪ್ಪನ ವೃತ್ತಿಯನ್ನು ಬಿಟ್ಟು ಬೇರೆ ಬೇರೆ ವೃತ್ತಿ ಆಯ್ಕೆ ಮಾಡಿರುತ್ತಾರೆ. ಅವರ ಜೀವನದಲ್ಲಿ ಹಣಕಾಸಿನ ವ್ಯವಸ್ಥೆ ಉತ್ತಮವಾಗಿದ್ದಾಗ ಬಡ ನೌಕರರ ಮಕ್ಕಳು ಡಾಕ್ಟರ್ ಇಂಜಿನಿಯರ್ ಹೀಗೆ ಮುಂತಾದ ಉದ್ಯೋಗಗಳನ್ನು ಮಾಡಬಹುದು.

ಅಪ್ಪ ಹಾಕಿದ ಆಲದ ಮರ ಹಾಗೂ ನೂಲಿನಂತೆ ಸೀರೆ, ತಾಯಿಯಂತೆ ಮಗಳು ಮತ್ತು ಹಿರಿಯಕ್ಕನ ಸಾಲು ಮನೆ ಮನೆಗೆ ಎಂಬ ಗಾದೆಗಳು ಈ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಕೇಳುತ್ತೇವೆ .ಒಂದು ಕುಟುಂಬದ ಕರ್ಮಫಲಗಳು ಮತ್ತು ಪುಣ್ಯ ಫಲಗಳನ್ನು ಆ ಕುಟುಂಬದ ಮಕ್ಕಳು ಸಮಾಜದಲ್ಲಿ ಅನುಭವಿಸಬೇಕಾಗುತ್ತದೆ.

ಇಂಥ ವ್ಯವಸ್ಥೆ ನಗರದ ಜನರಿಗಿಂತ ಹಳ್ಳಿಯ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಗರದಲ್ಲಿ ಆದರೆ ಪಕ್ಕದ ಮನೆಯವರು ಹೇಗೋ ಏನೋ ಎಂದು ತಿಳಿದು ಹೆಚ್ಚಾಗಿ ಪಕ್ಕದ ಮನೆಯವರ ಜೊತೆ ಸಂಪರ್ಕ ಮಾಡುವುದಿಲ್ಲ. ಅದೇ ನಮ್ಮ ಹಳ್ಳಿಯಲ್ಲಿ ನಮ್ಮನ್ನು ಪ್ರತಿಯೊಬ್ಬರು ಅವರ ಸಂಸಾರಕ್ಕಿಂತ ಬೇರೆಯವರ ಸಂಸಾರದ ಬಗ್ಗೆ ತಿಳಿಯುವ ಕುತೂಹಲವೇ ಜಾಸ್ತಿ.ಒಂದೂ ಕುಟುಂಬದ ಕರ್ಮಫಲ ಮತ್ತು ಪುಣ್ಯಫಲಗಳು ಕುಟುಂಬದ ಜನರುಗಳನ್ನು ಕಿತ್ತು ತಿನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ತಂದೆಯ ಕರ್ಮಫಲಗಳನ್ನು ಮಕ್ಕಳನ್ನು ಕಾಡುವಂತೆ ಮಾಡುವ ಈ ಸಮಾಜ ಇದನ್ನು ನಾವು ಬ್ರಹ್ಮ ಬರೆದ ಹಣೆಬರಹ ಎಂಬ ಮಾತಿನಿಂದ ಜನರ ಬಾಯಿಗೆ ತುತ್ತಾಗಿ ಜೀವನದಿ ಕಷ್ಟಗಳು ಎದುರಾಗುತ್ತವೆ. ಈ ಸಮಾಜವು ನಮ್ಮನ್ನು ಒಳ್ಳೆಯವರಾಗಲು ಬಿಡದೆ ಕರ್ಮಗಳನ್ನು ಮಾಡುವಂತೆ ಮಾಡಿ ಆ ಫಲಗಳನ್ನು ನಾವು ಉಣ್ಣುವಂತೆಯೂ ಮಾಡುತ್ತದೆ . ನಿಮಗೆ ತಿಳಿದಿರಲಿ ಎರಡು ಕೈ ಸೇರಿದರೆ ಚಪ್ಪಾಳೆ ಕರ್ಮಫಲಗಳು ಒಂದು ಕಡೆಯಿಂದ ಆಗಲು ಸಾಧ್ಯವಿಲ್ಲ , ಆದರೆ ಕರ್ಮ ಫಲಗಳು ಬಾಯಿಂದ ಬಾಯಿಗೆ ಹರಿದು ಅವು  ಸ್ವಾರ್ಥ ರೂಪ ತಾಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅದಕ್ಕೆ ಡಿ.ವಿ.ಜಿ ಅವರು ಬರೆದಿರುವ ಮಂಕುತಿಮ್ಮನ ಕಗ್ಗ ಎಂಬ ಪುಸ್ತಕದ ಕೆಲವು ಸಾಲುಗಳು ಕರ್ಮಫಲದ ಕುರಿತು ತಿಳಿಸುತ್ತದೆ.

ಕರುಮು ಬಂದಿರುವುದು ಮೋಹನದ ರೂಪಿನಲಿ

ಕಿರುನಗುವು ಕುಡಿ ನೋಟ ಕೊಂಕುನುಡಿಗಳಲಿ

ಕರೆದು ತಳ್ಳುವ ತಳ್ಳುದಿಸುತೊಳಗೆ ಕಿಚ್ಚಿಡುವ

ತರಳತೆಯದೆಂ ತಂತ್ರ --ಮಂಕುತಿಮ್ಮ


ಕರ್ಮಫಲವು ಹೇಗೆ ಬೇಕಾದರೂ ಬರಬಹುದು ನಿನ್ನ ಪೂರ್ವಾರ್ಜಿತ ಕರ್ಮ ಮೋಹನಾಕಾರವನ್ನು ತಾಳಿ ನಿನ್ನ ಎದುರು ಬರಬಹುದು .ಮಂದಹಾಸವನ್ನು ಬೀರಿ ಕುಡಿ ನೋಟದಿಂದ ನೋಡಿ ,ಕೊಂಕು ನುಡಿಯನ್ನು ನುಡಿದು ನಿನ್ನನ್ನು ಮರಳುಗೊಳಿಸಬಹುದು, ಆದರೆ ಅವೆಲ್ಲವೂ ಪ್ರೀತಿಯ ಸ್ನೇಹದ ಸರಳತೆಯೆಂದು ತಿಳಿದರೆ ನೀನು ಬೆಪ್ಪನಾಗುತ್ತೀಯ. ಆ ಮೋಹನ ರೂಪ ನಿನ್ನನ್ನು ಹತ್ತಿರಕ್ಕೆ ಕರೆದುಕೊಂಡು ಕ್ಷಣದಲ್ಲಿಯೇ ದೂರ ನೂಕುತ್ತದೆ. ನಿನ್ನನ್ನು ಆಲಂಗಿಸಿ ಕೊಳ್ಳುತ್ತಿರುವಾಗಲೇ ನಿನ್ನೊಳಗೆ ಬೆಂಕಿ ಇಡುತ್ತದೆ.ಇದು ವಿಧಿಯ ಒಂದು ಕುತಂತ್ರ.

ಈಗ ನೀವೇ ಹೇಳಿ ಅಪ್ಪ ಹಾಕಿದ ಆಲದ ಮರವನ್ನು ಈ ಸಮಾಜವು ಇದು ವಂಶ ಪಾರಂಪರ್ಯ ಗುಣ ಎಂದು ಹೇಳುವುದು ಮತ್ತು ಮುಂದುವರೆದ ಈ ಯುಗದಲ್ಲಿ ವಿಜ್ಞಾನವು ಇದನ್ನು ಜೀನ್ಸ್ ನ ಪ್ರಭಾವ ಎಂದು ಹೇಳುವುದು.

ನಾವು ಎಲ್ಲರೂ ಒಂದಲ್ಲ ಒಂದು ರೀತಿ ಅಪ್ಪ ಹಾಕಿದ ಆಲದ ಮರಕ್ಕೆ ನೇತು ಬಿಗಿದುಕೊಳ್ಳಲು ಕಾದು ನಿಂತಿರುವವರೆ.

ಇದನ್ನು ಬ್ರಹ್ಮ ಬರೆದ ಹಣೆಬರಹ ಹಾಗೂ ವಿದಿ ಲಿಖಿತ ಎಂಬ ಪದದಿಂದ ಈ ಸಮಾಜವು ಬೇರೆಯವರ ಕರ್ಮದ ಫಲಗಳನ್ನು ತನ್ನ ಸ್ವಾರ್ಥಕ್ಕೆ ಬಳಸಲು ಸಿದ್ಧವಾಗಿರುತ್ತದೆ.

ಈಗ ನೀವೇ ಹೇಳಿ ಅಪ್ಪ ಹಾಕಿದ ಆಲದ ಮರ ನಿಮ್ಮನ್ನು ಕಾಡದೆ ಬಿಟ್ಟಿದೆಯೆ.??????


ನಮ್ಮಪ್ಪ ಹಾಕಿದ ಆಲದ ಮರ

ಮರ ನೋಡಿದ ನನಗೆ ಬಂತು ಜ್ವರ

ಮರದ ಬಿಳಿಲುಗಳು ಹೇಳುವವು ಸ್ವರ

ಕಾಪಾಡು ನನ್ನ ಕರ್ಮಫಲದ ಓ ಎಮ್ಮರ

ಬ್ರಹ್ಮ ಬರೆದನಂತೆ ವಿಧಿಯ

ಅಪ್ಪ ಹಾಕಿದ್ದಾನೆ ಆಲದ ಮರದ ನಿಧಿಯ

ಕರ್ಮಫಲವು ನನ್ನ ತಿಂದು ನಾ ಹಾದೆ ಮುದಿಯ

ಜೀವನದಲ್ಲಿ ಸವಿದೆ ಕಷ್ಟ ಸುಖದ ಸವಿಯ

ಯಾರನ್ನು ನಡದೆ ಬಿಟ್ಟಿಲ್ಲವಂತೆ ಆಲದ ಮರದ ಸಸಿಯ


ಅದಕ್ಕೆ ಪ್ರತಿಯೊಂದು ಜೀವವು ಏಕಾಂಗಿಯಾಗಿ ಹುಟ್ಟಿ, ಜೀವನ ಪರ್ಯಂತ ಮಾಡುವ ಕೆಲಸ ನಮ್ಮಂತೆ ಹುಟ್ಟಿರುವ ಜೀವಗಳ ಜೊತೆ ಆಡುವ, ಬಾಳುವ ಹಂಬಲದಿಂದ ಅಲೆಯುತ್ತದೆ ಹಾಗೆ ಬದುಕು ಪ್ರೀತಿ ,ಋಣ ,ಮಮತೆ ಎಂಬುದನ್ನು ಸಾಗರದಲ್ಲಿ ಹುಡುಕುತ್ತಾ ಸಂಚರಿಸುತ್ತದೆ.


*********ಲೇಖಕರು *******

ಡಾ. ಚಂದ್ರಶೇಖರ. ಸಿ. ಹೆಚ್ 



*****#ಲೇಖಕರು*****

ಡಾ. ಚಂದ್ರಶೇಖರ್ ಸಿ. ಹೆಚ್


Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ