ಗೆಲುವು ಎಂದರೇನು???




ನಾವು ಗೆಲುವು ಎಂದರೆ ನಿರ್ದಿಷ್ಟವಾಗಿ ಇದೆ ಎಂದು ತಿಳಿಯುವುದು ಸುಲಭವಲ್ಲ. ಗೆಲುವು ಪ್ರತಿಯೊಬ್ಬರಿಗೂ ತನ್ನದೇ ಕ್ಷೇತ್ರದಲ್ಲಿ ಕಾರ್ಯ ಮಾಡುವವರಿಗೆ ಭಿನ್ನವಾಗಿರುತ್ತದೆ. ಅದನ್ನು ಹೀಗೆ ಎಂದು ತಿಳಿಯುವುದು ಕಷ್ಟ ಸಾಧ್ಯ. ಉದಾಹರಣೆಗೆ ನಾವು ಶಿಕ್ಷಕನನ್ನು ತೆಗೆದುಕೊಂಡಾಗ ಆ ಶಿಕ್ಷಕ ಶಾಲೆಯಲ್ಲಿ ಮತ್ತು ಊರಿನಲ್ಲಿ ಶಾಲೆಯ ಮಕ್ಕಳು ಮತ್ತು ಊರಿನ ಸಾರ್ವಜನಿಕರ ಬಳಿ ಉತ್ತಮ ಪ್ರಶಂಸೆ ಪಡೆದು ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಸರ್ಕಾರದಿಂದ ಅವನಿಗೆ ಲಭಿಸಿದರೆ ಅದು ಅವನ ಗೆಲುವು ಎಂದು ಹೇಳಲು ಬಹುದು 

ಒಬ್ಬ ಆಟಗಾರ ಕ್ರೀಡೆಯಲ್ಲಿ ಸತತ ಪರಿಶ್ರಮದಿಂದ ಕಠಿಣ ಅಭ್ಯಾಸದಿಂದ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿ ನಮ್ಮ ರಾಜ್ಯ ಅಥವಾ ನಮ್ಮ ದೇಶವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಿದರೆ ಅದನ್ನು ನಾವು ಗೆಲುವು ಎಂದು ತಿಳಿಯಲು ಬಹುದು.

ಹಾಗೆ ಒಬ್ಬ ಸನ್ಯಾಸಿಗೆ ಗೆಲುವು ಎಂದರೆ ಕೇಳಿದಾಗ ಕಾಮ, ಕ್ರೋಧ, ಮದ, ಮತ್ಸರ, ಲೋಭ ಇವುಗಳನ್ನು ಜಯಿಸಿ ಪರಿಶ್ರಮ ಏಕಾಗ್ರತೆಯಿಂದ ಕಾಯಕದ ಅಭ್ಯಾಸ ಜೊತೆಗೆ ದೇವರ ಸ್ಮರಣೆ ಮಾಡುತ್ತಾ ಧ್ಯಾನ ಚಿತ್ತನಾಗಿ ಮನಸ್ಸನ್ನು ಶಾಂತ ಚಿತ್ತವಾಗಿ ದೇವರನ್ನು ಕುರಿತು ಜಪಿಸುವುದು ಎಂದು ತಿಳಿಯಬಹುದು.

ಅದೇ ರೀತಿ ಒಬ್ಬ ಕೋಟ್ಯಾಧಿಪತಿಯನ್ನು ಗೆಲುವು ಎಂದರೇನು ಕೇಳಿ ತಿಳಿದರೆ ನಾನು ಸದಾ ಪರಿಶ್ರಮದಿಂದ ಸಣ್ಣ ಮೊತ್ತದ ಹಣದಿಂದ ನನ್ನ ಉದ್ಯೋಗವನ್ನು ಮಾಡುತ್ತ ಬಂದ ಲಾಭದ ಹಣವನ್ನು ಬೇರೆ ಬಿಸಿನೆಸ್ ನಲ್ಲಿ ವಿನಯೋಗಿಸಿ ಶ್ರಮದಿಂದ ದುಡಿದು ಹಣವನ್ನು ಸಂಪಾದಿಸಿ ಕೋಟ್ಯಾಧಿಪತಿಯಾಗಿ ಐಷಾರಾಮಿ ಬಂಗಲೆಯಲ್ಲಿ ಕಾರು, ಆಳುಗಳ ಮದ್ಯೆ ಸುಖ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹೇಳಬಹುದು.

ಒಬ್ಬ ಬಡವನನ್ನು ನಾವು ಕಂಡಾಗ ಅವನು ಒಪ್ಪತ್ತಿನ ಊಟಕ್ಕಾಗಿ ಕಷ್ಟಪಟ್ಟು ಹಗಲೆಲ್ಲ ಶ್ರಮದಿಂದ ದುಡಿದು ಬರುವ ಆದಾಯದಿಂದ ಹೆಂಡರು ಮಕ್ಕಳು ಮುರುಕಲು ಸೂರಲ್ಲಿ ಊಟವನ್ನು ಮಾಡಿ ತಮ್ಮ ಸಂಸಾರ ಸಾಗಿಸುವುದೇ ಅವನ ಪಾಲಿಗೆ ಗೆಲುವು ಆ ದಿನದ ಮಟ್ಟಿಗೆ ಆಗಿರುತ್ತದೆ.

ಒಬ್ಬ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ಜೀವನದಲ್ಲಿ ಉತ್ತಮ ಅಂಕಗಳನ್ನು ಪಡೆದು ಸರ್ಕಾರಿ ಕೆಲಸಕ್ಕೆ ಸೇರಿ ಒಳ್ಳೆಯ ಸಂಬಳವನ್ನು ಪಡೆದು ಅವನು ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆದು. ತಂದೆ, ತಾಯಿ ಜೊತೆ ಜೀವನವನ್ನು ಸಾಗಿಸುವುದನ್ನು ನಾವು ಗೆಲುವು ಎಂದು ಹೇಳಲು ಬಹುದು.

ಹಾಗೆ ನಾವು ಒಬ್ಬ ರಾಜಕಾರಣಿಯನ್ನು ನೋಡುವುದಾದರೆ ಅವನು ತನ್ನ ಪಕ್ಷಕ್ಕಾಗಿ ದುಡಿದು ಜನಸೇವೆಯ ನಾಯಕನಾಗಿ ಜನರಿಂದ  ಆಯ್ಕೆಯಾಗಿ ಅವನು ಜನಗಳ ಓಟಿನಿಂದ ನಮ್ಮ ಕ್ಷೇತ್ರಗಳ ಎಂಎಲ್ಎ ಆಗುತ್ತಾನೆ. ಹೀಗೆ ಅವನು ಗೆಲುವು ಎಂಬುದನ್ನು ಕಾಣುತ್ತಾನೆ ಇಷ್ಟಕ್ಕೆ ನಿಲ್ಲುವುದಿಲ್ಲ ಮುಂದೆ ಎಂಪಿ, ಮಂತ್ರಿ ಹೀಗೆ ಅವನ ಗೆಲುವಿನ ಆಸೆ ಮುಂದುವರೆಯುತ್ತದೆ.

ಇವರೆಲ್ಲ ತಮ್ಮ ಜೀವನದಿ ದುಡಿದು ಬೆಳವಣಿಗೆಯನ್ನು ಬದುಕಿನಲ್ಲಿ ಹೊಂದಿ ಜೀವನ ಸಾಗಿಸುವುದು ಗೆಲುವು ಎಂದು ಹೇಳಲು ಸಾಧ್ಯವೇ. ನಾವು ಅಂದುಕೊಂಡ ವಿಷಯದಲ್ಲಿ ಪರಿಶ್ರಮ ಪಟ್ಟು ಏಕಾಗ್ರತೆ ಆತ್ಮವಿಶ್ವಾಸದಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಿರಬಹುದು ಅದು ನಮಗೆ ಶ್ರಮಕ್ಕೆ ಸಿಕ್ಕ ಗೆಲುವು ಕೂಡ ಆಗಿರಬಹುದು

ಆದರೆ ಎಲ್ಲರೂ ತಮ್ಮ ಹುಟ್ಟಿನಿಂದ ಸಾವಿನವರೆಗೆ ಅವರ ಬದುಕಿನ ಸಾರವನ್ನು ತಿಳಿಯುತ್ತಾ ಹೊರಟರೆ ಅವರ ಜೀವನದಲ್ಲಿ ಗೆಲುವು ಎಂಬುದು ಕೆಲವು ವಿಷಯಗಳಲ್ಲಿ ಕಾಣಸಿಗುವುದಿಲ್ಲ ಅವನು ಆಟಗಾರನೇ ಹಾಗಲಿ, ವಿದ್ಯಾರ್ಥಿ, ಬಡವ, ಕೋಟ್ಯಾಧಿಪತಿ ಯಾರೇ ಆಗಲಿ ತಮ್ಮ ಜೀವನದಲ್ಲಿ ಹುಟ್ಟಿನಿಂದ ಕೊನೆಯವರೆಗೆ ಯಾವುದಾದರೂ ಒಂದರಲ್ಲಿ ಅವನ ಜೀವನದಲ್ಲಿ ಗೆಲುವಿನಿಂದ ವಂಚಿತನಾಗಿರುತ್ತಾನೆ. ಕೆಲವರಲ್ಲಿ ಹಣವಿರುತ್ತದೆ, ಶೈಕ್ಷಣಿಕ ಜೀವನದಲ್ಲಿ ಸೋಲನ್ನು ಕಂಡು ಇರುತ್ತಾರೆ ಅಥವಾ ಕೆಲವರು ಸಂಸಾರಿಕ ಜೀವನದಲ್ಲಿ ವಿಫಲರಾಗಿರುತ್ತಾರೆ ಹೀಗೆ ಹುಡುಕುತ್ತಾ ಹೊರಟರೆ ತಮ್ಮ ಜೀವನದಲ್ಲಿ ಎಲ್ಲರಿಗೂ ಗೆಲುವು ಎಂಬುದು ಎಲ್ಲಾ ವಿಷಯಗಳಲ್ಲಿ ಬದುಕಿನ ತಿರುವುಗಳಲ್ಲಿ ನಮಗೆ ಸಿಗದೇ ಇರುವುದು ತಿಳಿದು ಬರುತ್ತದೆ ಹಾಗಿದ್ದರೆ ನೀವೇ ಹೇಳಿ ಗೆಲುವು ಎಂದರೇನು??????

ಇಟ್ಟ ಗುರಿಯನ್ನು ಮುಟ್ಟುವುದೇ ನನ್ನ ಗೆಲುವೇ

ಸುಡುವ ಬಡತನವ ಮೆಟ್ಟಿ ನಿಲ್ಲುವುದೇ ನನ ಗೆಲುವೇ

ಶಾಲೆಯಲ್ಲಿ ಅಂಕದಲಿ ಉತ್ತಮವಾಗಿ ತೇರ್ಗಡೆನನ ಗೆಲುವೇ

ಮನವು ಶಾಂತಿಯ ತೋಟವಾದರೆ ನನ್ನ ಗೆಲುವೆ 

ಚಟ್ಟವನ್ನು ಮಾಡಿ ಹಣದಲ್ಲಿ ನನ್ನ ಸುಟ್ಟರೆ ಗೆಲುವೇ


ಈಗ ನೀವೇ ಹೇಳಿ ಗೆಲುವು ಎಂದರೆ ಏನು ಎಂದು ತಿಳಿಯಬಹುದು.ಗೆಲುವು ಎಂಬುದು ಒಂದು ವಿಷಯಕ್ಕೆ ಸ್ಥಿಮಿತವಾದುದಲ್ಲ ಅದನ್ನು ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ವಿಷಯಗಳಿಗೆ ನಾವು ಗೆಲುವು ಎಂದು ವಿಮರ್ಷಿಸಬಹುದು.

ಒಬ್ಬ ಮನುಷ್ಯನಿಗೆ ಗೆಲುವು ಎಂದರೆ ಡಿ.ವಿ.ಜಿಯವರು ಬರೆದಿರುವ ಮಂಕುತಿಮ್ಮನ ಕಗ್ಗ ಎಂಬ ಪುಸ್ತಕದ ಕೆಲವು ಸಾಲುಗಳನ್ನು ನಾವು ಗೆಲುವು ಎಂದು ಅರ್ಥೈಸಿಕೊಳ್ಳಬಹುದೆ

ದನ, ಸಿಂಹ,ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲ 

ಇನುಸುಣಿಸು ಬೆದೆ ಬೆದರು ಅಷ್ಟೇ ಜೀವಿತವು

ಮನುಜನಂತನಿತರಿಂ ತೃಪ್ತಿ ವಡೆವನವಂಗೆ

ಕ್ಷಣ ಕ್ಷಣವು  ಹೊಸ ಹಸಿವು ----ಮಂಕುತಿಮ್ಮ


ಈ ಸಾಲುಗಳ ತಾತ್ಪರ್ಯವೇನೆಂದರೆ ದನ,ಸಿಂಹ ಹುಲಿ, ಹಕ್ಕಿ,ಹಾವು,ಮೀನುಮುಂತಾದ ಮೃಗಪಕ್ಷಿಗಳಿಗೆಲ್ಲ ಬೇಕಾದದ್ದೇನು ಪೋಷಣೆಗೆ ಬೇಕಾದಷ್ಟು ಆಹಾರ, ಸಂತಾನಾರ್ಥವಾಗಿ ಹೆಣ್ಣು ಗಂಡುಗಳು ಪರಸ್ಪರ ಸೇರುವ ಆಸೆ, ಜೀವಕ್ಕಾಗಿ ಹೆದರಿಕೆ ಅದಕ್ಕಾಗಿ ಒಂದು ವಸತಿ, ಇಷ್ಟೇ ಅವುಗಳ ಜೀವಿತ, ಮನುಷ್ಯನು ಇವಿಷ್ಟರಿಂದಲೆ ತೃಪ್ತಿ ಪಡೆಯುವನೇನು ಅವನಿಗಾದರೂ ಕ್ಷಣಕ್ಷಣಕ್ಕೂ ಹೊಸ ಹೊಸ ದಾದ ಹಸಿವು ಕಾಣಿಸಿಕೊಳ್ಳುತ್ತಲೇ ಇರುತ್ತದೆ

ಹೀಗೆ ಮನಸ್ಸಿನ ಆಸೆ ಬೆಳೆದಂತೆಲ್ಲ ಹಸಿವು ಬೆಳೆಯುತ್ತದೆ ಒಂದಾದ ಮೇಲೆ ಒಂದಾದ ಮೇಲೆ ಒಂದು ಹುಟ್ಟುವದು ಹಸಿವನ್ನು ತಣಿಸಲು ಬಗೆಬಗೆಯ ಯುಕ್ತಿಯನ್ನು ಮನುಷ್ಯ ಅನುಸರಿಸುತ್ತಾನೆ. ಇದರಿಂದಲೇ ಮನುಷ್ಯನ ಹೇಳಿಗೆ ಅಭಿವೃದ್ಧಿ ಇವುಗಳನ್ನು ಗೆಲುವು ಎಂದು ತೃಪ್ತಿ ಪಡುತ್ತಾನೆ.

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ